ಸಿದ್ದಾಪುರ: ತಾಲೂಕಿನ ಕಾಳೇನಳ್ಳಿ ಸಮೀಪ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಸೊರಬ ತಾಲೂಕಿನ ಚಿಕ್ಕತೌಡತ್ತಿಯ ಸಂತೋಷ ಗಣಪತಿ ನಾಯ್ಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಹಾಗೂ ಇನ್ನು ನಾಲ್ವರನ್ನು ಬಂಧಿಸುವುದಕ್ಕೆ ಮೂರು ತಂಡಗಳನ್ನು ರಚಿಸಲಾಗಿದೆ ಎಂದು ಎಡಿಶನಲ್ ಎಸ್ಪಿ ಎನ್.ಜಗದೀಶ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆರೋಪಿಗಳನ್ನು ಹಿಡಿಯುವುದಕ್ಕೆ ಡಿವೈಎಸ್ಪಿ ಗೀತಾ ಪಾಟೀಲ್ ನೇತೃತ್ವದಲ್ಲಿ ಶಿರಸಿ ಶಹರ ಠಾಣೆಯ ಪಿಎಸ್ಐ ನಾಗಪ್ಪ, ಶಿರಸಿ ಟ್ರಾಪಿಕ್ ಪಿಎಸ್ಐ ಎಂ.ಜಿ.ಕುಂಬಾರ ಹಾಗೂ ಯಲ್ಲಾಪುರ ಠಾಣೆಯ ಪಿಎಸ್ಐ ರಮೇಶ ಹಾನಪುರ ಇವರನ್ನು ನೇಮಕಮಾಡಲಾಗಿದ್ದು ಈಗಾಗಲೇ ಈ ತಂಡ ಆರೋಪಿಗಳನ್ನು ಹಿಡಿಯುವುದಕ್ಕೆ ಕಾರ್ಯಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಎರಡು ದಿನದಲ್ಲಿ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಸಂತ ನಾಯ್ಕ ಮನಮನೆ ಅವರನ್ನು ಗುರುವಾರ ವಿಚಾರಣೆಗಾಗಿ ಸಿದ್ದಾಪುರ ಠಾಣೆಗೆ ಕರೆತಂದು ವಿಚಾರಿಸಲಾಗಿದೆ. ಅವಶ್ಯವಿದ್ದಾಗ ಪುನಃ ಕರೆದಾಗ ಬರುವಂತೆ ತಿಳಿಸಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಸಿದ್ದಾಪುರ ಪಿಐ ಜೆ.ಬಿ.ಸೀತಾರಾಮ ಉಪಸ್ಥಿತರಿದ್ದರು.